Home ಸುದ್ದಿಗಳು ರಾಜ್ಯ ಸುದ್ದಿ ಪಶುಮೇಳ ಮುಖ್ಯಮಂತ್ರ ಯಡಿಯೂರಪ್ಪ ಉದ್ಘಾಟನೆ-ಸಚಿವ ಪ್ರಭು ಚೌವ್ಣಾಣ್

ಪಶುಮೇಳ ಮುಖ್ಯಮಂತ್ರ ಯಡಿಯೂರಪ್ಪ ಉದ್ಘಾಟನೆ-ಸಚಿವ ಪ್ರಭು ಚೌವ್ಣಾಣ್

ಬೀದರ: ರಾಜ್ಯಮಟ್ಟದ ಪಶುಮೇಳವನ್ನು ಮುಖ್ಯಮಂತ್ರಿಗಳಾದ ಬಿ.ಎಸ್.ಯಡಿಯೂರಪ್ಪ ಅವರು ಚಾಲನೆ ನೀಡಲಿದ್ದಾರೆ. ಜೊತೆಗೆ ಉಪ ಮುಖ್ಯಮಂತ್ರಿಗಳಾದ ಗೋವಿಂದ. ಕಾರಜೋಳ, ಡಾ..ಅಶ್ವಥ್ ನಾರಾಯಣ ಹಾಗೂ ಲಕ್ಷ್ಮಣ ಸವದಿ ಹಾಗೂ ಇನ್ನಿತರ ಸಚಿವರು, ಗಣ್ಯರು ಆಗಮಿಸುವರು ಎಂದು  ಪಶು ಸಂಗೋಪನೆ, ಅಲ್ಪಸಂಖ್ಯಾತರ ಕಲ್ಯಾಣ, ಹಜ್ ಮತ್ತು ವಕ್ಫ್ ಹಾಗೂ ಬೀದರ ಜಿಲ್ಲಾ ಉಸ್ತುವಾರಿ ಸಚಿವರಾದ ಪ್ರಭು.ಬಿ.ಚವ್ಹಾಣ ತಿಳಿಸಿದರು.

ಫೆ.3ರಂದು ಕರ್ನಾಟಕ ಪಶುವೈದ್ಯಕೀಯ, ಪಶು ಮತ್ತು ಮೀನುಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ ಆವರಣದಲ್ಲಿ ಪಶುಮೇಳ ಸಿದ್ಧತೆಯನ್ನು ಪರಿಶೀಲಿಸಿದ ನಂತರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಻ವರು, ತಾವು ಅಧಿಕಾರಕ್ಕೆ ಬಂದ ಬಳಿಕ ಕಲ್ಯಾಣ ಕರ್ನಾಟಕ ನಾಮಕರಣ, ಅನುಭವ ಮಂಟಪಕ್ಕೆ ಅನುದಾನ, ಔರಾದ್ ಬೀದರ ರಸ್ತೆಗೆ ಅನುದಾನ, ಸಂಸದರಾದ ಭಗವಂತ ಖೂಬಾ ಅವರ ಪ್ರಯತ್ನದಿಂದ ಔರಾದ್ ನಾಂದೇಡ್ ರೈಲು ಸೇರಿದಂತೆ ಹಲವಾರು ಕಾರ್ಯಕ್ರಮಗಳಾಗಿವೆ. ಜೊತೆಗೆ ಇದೇ ಮೊದಲ ಬಾರಿಗೆ ಕಲ್ಯಾಣ ಕರ್ನಾಟಕ ಭಾಗದಲ್ಲಿ ರಾಜ್ಯಮಟ್ಟದ ಪಶುಮೇಳ ನಡೆಯುತ್ತಿರುವುದು ತಮಗೆ ಅತ್ಯಂತ ಹೆಮ್ಮೆಯ ಸಂಗತಿಯಾಗಿದೆ. ಈ ಪ್ರಯತ್ನದ ಹಿಂದೆ ಇರುವ ಇಡೀ ಬೀದರ ಜಿಲ್ಲೆಯ ಜನರ ಹಾಗೂ ಎಲ್ಲ ಜನಪ್ರತಿನಿಧಿಗಳ ಸಹಕಾರ ಮರೆಯಲಾರೆ ಎಂದು ತಿಳಿಸಿದರು.

1 ಲಕ್ಷ ಜನ ಭಾಗಿ: ಮೂರು ದಿನಗಳವರೆಗೆ ನಡೆಯುವ ಈ ಕಾರ್ಯಕ್ರಮದಲ್ಲಿ ಅಂದಾಜು 1 ಲಕ್ಷ ಜನರು ಸೇರುವ ನಿರೀಕ್ಷೆಯಿದೆ ಎಂದು ಸಚಿವರು ಇದೇ ವೇಳೆ ತಿಳಿಸಿದರು. ಹೆಚ್ಚಿನ ಸಂಖ್ಯೆಯಲ್ಲಿ ಸೇರುವ ಜನ, ಜಾನುವಾರುಗಳಿಗಾಗಿ ಎಲ್ಲ ರೀತಿಯ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ತಿಳಿಸಿದರು.

ನಾನಾ ಸ್ಪರ್ಧೆ: ಈ ಪಶುಮೇಳದಲ್ಲಿ ಫೆಬ್ರವರಿ 8ರಂದು ಹೈನು ರಾಸುಗಳಲ್ಲಿ ಹಾಲು ಕರೆಯುವ ಸ್ಪರ್ಧೆ, ಕರುಗಳ ಪ್ರದರ್ಶನ, ಫೆ.9ರಂದು ಶ್ವಾನ ಪ್ರದರ್ಶನ, ಬಹುಮಾನ ವಿತರಣೆ, ಸಮಾರೋಪ ಸಮಾರಂಭ ನಡೆಯಲಿದೆ ಎಂದು ಮಾಹಿತಿ ನೀಡಿದರು.

ಬೀದರ ಜನತೆಗೆ ಸುವರ್ಣಾವಕಾಶ: ನಾವು ತಪ್ಪದೇ ನೋಡಲೇ ಬೇಕಾದಂಥಹ ಹತ್ತು ಹಲವು ತಳಿಯ ಹಸು, ಎಮ್ಮೆ, ಕುರಿ, ಮೇಕೆ, ಹಂದಿ, ಮೊಲಗಳ ಪ್ರದರ್ಶನ ಜೊತೆಗೆ ಅವುಗಳ ನಿರ್ವಹಣೆ ಕುರಿತು ಮಾಹಿತಿ, ಹಾಲು, ಮಾಂಸ ಮತ್ತು ಉಣ್ಣೆ ಉತ್ಪನ್ನಗಳ ಮಾಹಿತಿ ಮತ್ತು ಮಾರಾಟ ಜೊತೆಗೆ ಮೀನುಗಾರಿಕೆ ಇಲಾಖೆಯಿಂದ ಮತ್ಸö್ಯ ಪ್ರದರ್ಶನ, ತೋಟಗಾರಿಕೆ ಇಲಾಖೆಯಿಂದ ಫಲಪುಷ್ಪ ಪ್ರದರ್ಶನ ಏರ್ಪಾಡು ಮಾಡಿದ್ದು, ಜನರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಬೇಕು ಎಂದು ಸಚಿವರು ಕೋರಿದರು.

ನಿರಂತರ ಕಾರ್ಯಕ್ರಮ: ತಾಂತ್ರಿಕ ಸಮ್ಮೇಳನ ಮತ್ತು ತಜ್ಞರೊಂದಿಗೆ ರೈತರ ಸಂವಾದ ಮೂರು ದಿನ ನಡೆಯಲಿದೆ. ರಾಜ್ಯದ ಪ್ರತಿ ಜಿಲ್ಲೆಯಿಂದ ತಲಾ ಒಬ್ಬರಂತೆ ಒಟ್ಟು 30 ಜನ ಪ್ರಗತಿಪರ ರೈತರನ್ನು ಸನ್ಮಾನಿಸಲಾಗುತ್ತಿದೆ. ಮೂರು ದಿನಗಳವರೆಗೆ ನಡೆಯಲಿರುವ ಪಶುಮೇಳದಲಿ ಎಲ್ಲ ಜಿಲ್ಲೆಗಳಿಂದ ವಿವಿಧ ತಳಿಯ 500 ಜಾನುವಾರುಗಳು ಭಾಗವಹಿಸುತ್ತಿವೆ. 22 ಇಲಾಖೆಗಳಿಂದ ಮಳಿಗೆಗಳನ್ನು ತೆರೆದು ಆಯಾ ಇಲಾಖೆಗಳ ಯೋಜನೆಗಳ ಬಗ್ಗೆ ಜನಜಾಗೃತಿ ಮೂಡಿಸಲಾಗುತ್ತದೆ ಎಂದು ಸಚಿವರು ಹೇಳಿದರು.

ಸಾಂಸ್ಕೃತಿಕ ಕಾರ್ಯಕ್ರಮಗಳು: ಮೇಳದಲ್ಲಿ ಸಂಜೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ. ಫೆ.7ರಂದು ಗಂಗಾವತಿ ಪ್ರಾಣೇಶ ಹಾಗೂ ಇನ್ನಿತರರಿಂದ ಹಾಸ್ಯ ಕಾರ್ಯಕ್ರಮ, 8ರಂದು ಖ್ಯಾತ ಕಲಾವಿದರಿಂದ ಸಾಂಸ್ಕೃತಿಕ ಕಾರ್ಯಕ್ರಮ ಹಾಗೂ 9ರಂದು ಕುರಿಗಾರ ಹಾಗೂ ಖ್ಯಾತ ಗಾಯಕ ಹಣುಮಂತಪ್ಪ ಲಮಾಣಿ ಅವರಿಂದ ಸಂಗೀತ ಕಾರ್ಯಕ್ರಮ ನಡೆಯಲಿದೆ ಎಂದು ತಿಳಿಸಿದರು.

ಉಚಿತ ಬಸ್ ವ್ಯವಸ್ಥೆ: ಪಶುಮೇಳಕ್ಕೆ ಹೊರ ಜಿಲ್ಲೆಗಳಿಂದ ಮತ್ತು ಜಿಲ್ಲೆಯ ವಿವಿಧೆಡೆಯಿಂದ ಆಗಮಿಸುವ ರೈತರು ಮತ್ತು ಸಾರ್ವಜನಿಕರಿಗೆ ಅನುಕೂಲ ಕಲ್ಪಿಸಲು ಬಸ್ ನಿಲ್ದಾಣದಿಂದ ಪಶು ವೈದ್ಯಕೀಯ ಮಹಾವಿದ್ಯಾಲಯದವರೆಗೆ ಹೋಗಿ ಬರಲು ಸಾರಿಗೆ ಇಲಾಖೆಯಿಂದ ಉಚಿತ ಬಸ್ ವ್ಯವಸ್ಥೆ ಕಲ್ಪಿಸಲಾಗಿದೆ. ಮೇಳಕ್ಕೆ ಬರುವ ಜಾನುವಾರುಗಳಿಗೆ ಮೇವು, ಕುಡಿವ ನೀರು, ರೈತರಿಗೆ ಊಟ ಮತ್ತು ವಸತಿ ವ್ಯವಸ್ಥೆಯನ್ನು ಉಚಿತವಾಗಿ ಮಾಡಲಾಗಿದೆ. ವಿವಿಧ ರೀತಿಯ ಆಹಾರ ಮಳಿಗೆ ಹಾಗೂ ವ್ಯಾಪಾರ ಮಳಿಗೆಗಳಿರುತ್ತವೆ ಎಂದು ಹೇಳಿದರು.

ಕಾರ್ಯಕ್ರಮ ಯಶಸ್ವಿಗೊಳಿಸಲು ಮನವಿ: ರಾಜ್ಯ ಮಟ್ಟದ ಪಶುಮೇಳವನ್ನು ಜಿಲ್ಲೆಯಲ್ಲಿ ಪ್ರಥಮ ಬಾರಿಗೆ ಆಯೋಜಿಸಿರುವುದು ಬೀದರ ಜಿಲ್ಲೆಯ ಸಮಸ್ತ ಜನರಿಗೆ ಹೆಮ್ಮೆಯ ವಿಷಯವಾಗಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ರೈತರು, ಮಹಿಳೆಯರು, ವ್ಯಾಪಾರಿಗಳು, ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಭಾಗಿಯಾಗಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕು ಎಂದು ಸಚಿವರು ಕೋರಿದರು.

ಸುದ್ದಿಗೋಷ್ಠಿಯಲ್ಲಿ ಪಶುಪಾಲನೆ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆಯ ಉಪ ನಿರ್ದೇಶಕರಾದ ಡಾ.ಗೋವಿಂದ ಬಿ.ಹೆಚ್, ವಿಶ್ವವಿದ್ಯಾಲಯ ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.

 

Date: 03-02-2020

Check Also

ಎಲ್ಲ ಗ್ರಾಮ, ತಾಂಡಾಗಳಿಗೆ ಸ್ಮಶಾನಭೂಮಿ ಒದಗಿಸಿ: ಶಾಸಕ ಪ್ರಭು ಚವ್ಹಾಣ

*ಸ್ಮಶಾನ ಭೂಮಿ ಕೊರತೆಯ ಬಗ್ಗೆ ಅಧಿವೇಶನದಲ್ಲಿ ಧ್ವನಿ ಎತ್ತಿದ ಶಾಸಕರು* *ಎಲ್ಲ ಗ್ರಾಮ, ತಾಂಡಾಗಳಿಗೆ ಸ್ಮಶಾನ…