Home ಸುದ್ದಿಗಳು ರಾಜ್ಯ ಸುದ್ದಿ ರಾಜ್ಯಮಟ್ಟದ ಪಶುಮೇಳ: ಸಿದ್ಧತೆ ಪರಿಶೀಲಿಸಿದ ಸಚಿವರು 

ರಾಜ್ಯಮಟ್ಟದ ಪಶುಮೇಳ: ಸಿದ್ಧತೆ ಪರಿಶೀಲಿಸಿದ ಸಚಿವರು 

ಬೀದರ: ಪಶುಪಾಲನೆ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆಯಿಂದ ಕರ್ನಾಟಕ ಪಶುವೈದ್ಯಕೀಯ, ಪಶು ಹಾಗೂ ಮೀನುಗಾರಿಕೆ ವಿಜ್ಞಾನಗಳ ಮಹಾ ವಿದ್ಯಾಲಯದ ಆವರಣದಲ್ಲಿ ಫೆಬ್ರವರಿ 7, 8 ಮತ್ತು 9ರವರೆಗೆ ನಡೆಯುವ ರಾಜ್ಯಮಟ್ಟದ ಪಶುಮೇಳದ ಸಿದ್ಧತೆಗಳು ತೀವ್ರ ರೀತಿಯಲ್ಲಿ ನಡೆದಿವೆ.
ಪಶು ಸಂಗೋಪಣೆ, ಅಲ್ಪಸಂಖ್ಯಾತರ ಕಲ್ಯಾಣ, ವಕ್ಫ ಹಜ್ ಮತ್ತು ಜಿಲ್ಲಾ ಉಸ್ತುವಾರಿ ಸಚಿವರಾದ ಪ್ರಭು ಚವ್ಹಾಣ್ ಅವರು ಫೆಬ್ರುವರಿ 3ರಂದು ಪಶು ವೈದ್ಯಕೀಯ ಮಹಾ ವಿದ್ಯಾಲಯಕ್ಕೆ ಭೇಟಿ ನೀಡಿ ಅಲ್ಲಿನ ಸಿದ್ಧತೆಯನ್ನು ಪರಿಶೀಲಿಸಿದರು. ಬಳಿಕ ಸುದ್ದಿಗೋಷ್ಠಿ ನಡೆಸಿ ಪತ್ರಕರ್ತರಿಗೆ ಪಶುಮೇಳದ ಸಿದ್ಧತೆ ಕುರಿತು ಮಾಹಿತಿ ನೀಡಿದರು.
ಪಶು ವೈದ್ಯಕೀಯ ಮಹಾ ವಿದ್ಯಾಲಯದ ಆವರಣದಲ್ಲಿ ಬೃಹಧಾಕಾರ ರೀತಿಯಲ್ಲಿ ಸಿದ್ಧವಾಗುತ್ತಿರುವ ಮುಖ್ಯವೇದಿಕೆಯನ್ನು ವೀಕ್ಷಿಸಿದ ಸಚಿವರು, ಸುಸಜ್ಜಿತ ರೀತಿಯಲ್ಲಿ ವೇದಿಕೆ ನಿರ್ಮಿಸುವಂತೆ ಸೂಚಿಸಿದರು.
ಮುಖ್ಯ ವೇದಿಕೆಯ ಪಕ್ಕ ಅಂದಾಜು 110 ವಾಣಿಜ್ಯ ಮಳಿಗೆಗಳನ್ನು ಹಾಕಲಾಗುತ್ತಿದ್ದು, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಿಂದ 10, ಪಶು ವಿವಿಯಿಂದ 5, ಪಶುಪಾಲನಾ ಇಲಾಖೆಯಿಂದ 5, ಕೃಷಿ ಮತ್ತು ತೋಟಗಾರಿಕಾ ಇಲಾಖೆ ಸೇರಿದಂತೆ ನಾನಾ ಇಲಾಖೆಗಳಿಂದ ಹಲವಾರು ಮಳಿಗೆಗಳನ್ನು ಹಾಕಲಾಗುವುದು ಎಂದು ಅಧಿಕಾರಿಗಳು ಸಚಿವರಿಗೆ ಮಾಹಿತಿ ನೀಡಿದರು. ಪಶುಮೇಳದಲ್ಲಿ ವಿವಿಧ ರೀತಿಯ ಆಹಾರ ಮಳಿಗೆಗಳು ಮತ್ತು ವ್ಯಾಪಾರ ಮಳಿಗೆಗಳನ್ನು ಹಾಕಲಾಗುತ್ತಿದೆ. ಜನರ ಉಪಚಾರಕ್ಕಾಗಿ ತಜ್ಞ ವೈದ್ಯರಿಂದ ತಾತ್ಕಾಲಿಕ ಆಸ್ಪತ್ರೆ ಮತ್ತು ಜಾನುವಾರಗಳ ಉಪಚಾರಕ್ಕಾಗಿ ತಾತ್ಕಾಲಿಕ ಪಶು ಆಸ್ಪತ್ರೆಯನ್ನು ಕೂಡ ತೆರಲಾಗುತ್ತಿದೆ ಎಂದು ಅಧಿಕಾರಿಗಳು ಸಚಿವರಿಗೆ ಮಾಹಿತಿ ನೀಡಿದರು. ಹೈನುರಾಸುಗಳಲ್ಲಿ ಹಾಲು ಕರೆಯುವ ಸ್ಪರ್ಧೆ, ಕರುಗಳ ಪ್ರದರ್ಶನ, ಶ್ವಾನ ಪ್ರದರ್ಶನಕ್ಕೆ ವೇದಿಕೆಯ ಪಕ್ಕ ಜಾಗದ ವ್ಯವಸ್ಥೆ ಮಾಡಲಾಗಿದೆ. ಬೇರೆ ಬೇರೆ ಜಿಲ್ಲೆಗಳಿಂದ ಬರುವ ಜಾನುವಾರುಗಳು ನಿಲ್ಲಲು 10*15 ಅಳತೆಯ ಮಳಿಗೆ ಹಾಕಲಾಗಿದೆ ಎಂದು ಅಧಿಕಾರಿಗಳು ಸಚಿವರಿಗೆ ತಿಳಿಸಿದರು.
ಮೇಳಕ್ಕೆ ಲಕ್ಷಕ್ಕೂ ಹೆಚ್ಚಿನ ಸಂಖ್ಯೆಯಲ್ಲಿ ಜನರು ಭಾಗಿಯಾಗುವ ಕಾರಣ ವಾಹನಗಳ ನಿಲುಗಡೆಗೆ ರಸ್ತೆ ಪಕ್ಕದ ಬಯಲು ಜಾಗೆಯಲ್ಲಿ ನಾಲ್ಕು ಕಡೆ ಪಾರ್ಕಿಂಗ್‍ಗೆ ವ್ಯವಸ್ಥೆ ಮಾಡಲಾಗಿದೆ ಎಂದು ಅಧಿಕಾರಿಗಳು ಸಚಿವರಿಗೆ ವಿವರಿಸಿದರು.
ರಾಜ್ಯಮಟ್ಟದ ಪಶುಮೇಳ-2020 ಪೋಸ್ಟರ್, ಕರಪತ್ರ ಬಿಡುಗಡೆ 
ಪಶು ಸಂಗೋಪನೆಯ ಧ್ಯೇಯ ರೈತರ ಅಭ್ಯುದಯ”, “ಪಶುಸಂಗೋಪನೆ ವೃದ್ಧಿ ರೈತರ ಅಭಿವೃದ್ಧಿ” ಎನ್ನುವ ಸಂದೇಶದ ರಾಜ್ಯಮಟ್ಟದ ಪಶುಮೇಳ-2020 ಪೋಸ್ಟರ್ ಮತ್ತು ಕರಪತ್ರಗಳನ್ನು ಸಚಿವರಾದ ಪ್ರಭು ಚವ್ಹಾಣ್ ಅವರು ಫೆಬ್ರುವರಿ 3ರಂದು ನಡೆದ ಪತ್ರಿಕಾಗೋಷ್ಠಿಯಲ್ಲಿ ಬಿಡುಗಡೆ ಮಾಡಿದರು.
ಬೀದರನ ನಂದಿನಗರದ ಕರ್ನಾಟಕ ಪಶುವೈದ್ಯಕೀಯ, ಪಶು ಹಾಗೂ ಮೀನುಗಾರಿಕೆ ವಿಜ್ಞಾನಗಳ ಮಹಾ ವಿದ್ಯಾಲಯದ ಆವರಣದಲ್ಲಿ ಫೆಬ್ರವರಿ 7, 8 ಮತ್ತು 9ರವರೆಗೆ ನಡೆಯಲಿರುವ ರಾಜ್ಯಮಟ್ಟದ ಪಶುಮೇಳ ಕಾರ್ಯಕ್ರಮಕ್ಕೆ ಆಗಮಿಸುವ ಮಾನ್ಯ ಮುಖ್ಯಮಂತ್ರಿಗಳಾದ ಬಿ.ಎಸ್.ಯಡಿಯೂರಪ್ಪನವರು ಹಾಗೂ ಇತರ ಗಣ್ಯರ ಭಾವಚಿತ್ರಗಳು, ಹಸು, ಕರುಗಳು, ಫಲಪುಷ್ಪ ಸೇರಿದಂತೆ ಜಾನುವಾರು ಚಿತ್ರಗಳು ಮತ್ತು ಮೇಳದಲ್ಲಿ ನಡೆಯುವ ವಿವಿಧ ಕಾರ್ಯಕ್ರಮಗಳ ಸಮಗ್ರ ವಿವರ ಇರುವ ಪೋಸ್ಟರ್ ಮತ್ತು ಕರಪತ್ರಗಳು ಮಾಹಿತಿ ಪೂರ್ಣವಾಗಿವೆ.ಪಶುಪಾಲನೆ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆ, ಬೀದರ ಜಿಲ್ಲಾಡಳಿತ, ಕರ್ನಾಟಕ ಹಾಲು ಮಂಡಳಿ, ಕೆವಿಎಫ್‍ಎಸ್‍ಯು ಮತ್ತು ಕೆ.ವಿ.ಎ. ಈ ಪೋಸ್ಟರ್ ಮತ್ತು ಕರಪತ್ರಗಳನ್ನು ಮುದ್ರಿಸಿವೆ.
Date: 03-02-2020  Time: 6:00PM

Check Also

ಎಲ್ಲ ಗ್ರಾಮ, ತಾಂಡಾಗಳಿಗೆ ಸ್ಮಶಾನಭೂಮಿ ಒದಗಿಸಿ: ಶಾಸಕ ಪ್ರಭು ಚವ್ಹಾಣ

*ಸ್ಮಶಾನ ಭೂಮಿ ಕೊರತೆಯ ಬಗ್ಗೆ ಅಧಿವೇಶನದಲ್ಲಿ ಧ್ವನಿ ಎತ್ತಿದ ಶಾಸಕರು* *ಎಲ್ಲ ಗ್ರಾಮ, ತಾಂಡಾಗಳಿಗೆ ಸ್ಮಶಾನ…